Friday, April 24, 2009

Ramanna & Bachche Gowda (Part-2) ವೀಸಾ ಕೇಳಿದಿವಿ, ಗೂಸಾ ಕೇಳಿದಿವೀ, ಯಾವುದಿದು ಸೀಸಾ?


ಸೀಸ ಅಲ್ಕಣ್ ಪೆಕ್ರೇ, ಈಸ ಅಂತ, ಆ ದೆಸುಕ್ ಓಗಕ್ಕೆ ಪರ್ಮಿಟ್ ಇದ್ದಂಗೆ ಅದು. ಮೂರೊತ್ತೂ ಸೀಸ ರಡಿ ಮಾಡದ್ರಗಿರ್ತ್ಯ ನೋಡು ನೀನು.

ಗುಳುವನಹಳ್ಳಿಯಾರ ಹಾದು ಹೋಗುವ ಬಸ್ ರಸ್ತೆಯ ಅಂಚಿಗೇ ಇತ್ತು ಬಚ್ಚಪ್ಪನ ಜಮೀನು. ಅದರಲ್ಲಿ ಒಂದು ಭಾಗವನ್ನು ಯಾರೋ ಬೆಂಗಳೂರಿನವರು ಸೈಟು ಮಾಡಲು ಮುವತ್ತು ಲಕ್ಷಕ್ಕೆ ಕೇಳಿರುವ ವಿಷಯವನ್ನು ತನ್ನ ದೂರದ ದಾಯಾದಿ ರಾಮಣ್ಣನಿಗೆ ಬೆರಗಿನ ಭಾವದಲ್ಲಿ ವಿವರಿಸುತ್ತಾ ಮುಂದೆ ನಡೆಯುತ್ತಿದ್ದ ಬಚ್ಚಪ್ಪ.

"ಬಲೇ ಅರ್ಜೆಂಟಾಗವ್ನೆ ಕಣಪೋ ಆ ರೀಲೆಷ್ಟೇಟ್ ದಲಾಳಿ. 'ಬಚ್ಚಪ್ಪಾ, ನೀನ್ ಊಂ ಅಂದ್ರೆ ನಾಳೆನೆ ಕ್ಯಾಸ್ ರಡಿ' ಅಂತನೆ" ಎನ್ನುತ್ತ ರಾಮಣ್ಣನ ಕಡೆ ನೋಡಿದ.

"ಈ ಕೊಂಪೇಲ್ ಸೈಟ್ ತಗಣಕ್ಕೆ ಯಾವನ್ ಬತ್ತನಂತ್ಲ? ಇಲ್ಲಿಂದ್ ಬೆಂಗ್ಳೂರ್ ಅಂಚ್ಗೋಗಕ್ಕೇ ಒಂದ್ ಗಂಟೆ ಆಯ್ತದೆ, ಸಿಟೀಗ್ ಓಗದಿರ್ಲಿ" ಎಂದ ರಾಮಣ್ಣ.

"ನಾನೂ ಅಂಗೇ ಅಂದೆ. ಆದ್ರೆ ಆ ದಲಾಳಿ ಅಂತನೆ ಬೆಂಗ್ಳೂರೋರು ಜಾಗಕ್ಕೆ ಎಷ್ಟು ಬರಗೆಟ್ಟೋಗವ್ರೆ ಅಂದ್ರೆ, ಮೊನ್ನೆ ಅವ್ನು ಮನೆ ಮುಂದೆ ತುಳ್ಸಿ ಕಟ್ಟೆ ಕಟ್ಟವಾಂತ ಒಂದೈದ್ ಅಡಿಯಷ್ಟು ನೆಲ ಕಿಲೀನು ಮಾಡುಸ್ತಾ ಇದ್ರೆ ಓಗೋಬರೋರೆಲ್ಲಾ 'ಓ, ಏನು ಸೈಟ್ ಮಾಡ್ತೀರಾ? ಏನು ರೇಟು?' ಅಂತ ಕೇಳವ್ರಂತೆ ! ಇನ್ನೇನೇಳವ?" ಎಂದು ಅಚ್ಚರಿಯ ಕೈಚೆಲ್ಲಿದ ಬಚ್ಚಪ್ಪ.

"ಯಾವನೋ ಗಿಲೀಟ್ ನನ್ಮಗ ಇದ್ದಂಗವ್ನೆ. ಸೈನ್ ಮಾಡಕ್ ಮುಂಚೆ ಉಸಾರು, ಆಮ್ಯಾಕ್ಕೆ ಎಲ್ಲಾ ಕ್ಯಾಸ್ ಯವಾರ ಅಂದ್ಬುಟ್ಟು ಒಂದ್ ಮೂಟೆ ಕೊಯ್ಮತ್ತೂರು ನೋಟುಗ್ಳು ಕೊಟ್ಟೋಗ್ಬುಟ್ಟಾನು !" ಎಂದು ರಾಮಣ್ಣ ಲಘುವಾಗಿ ಎಚ್ಚರಿಸುತ್ತಿದ್ದಂತೆ ಬಚ್ಚಪ್ಪನ ಮೊಬೈಲ್ ಫ಼ೋನು ಸದ್ದು ಮಾಡತೊಡಗಿತು.

ಮೊಬೈಲ್ ಫೋನುಗಳ ಮೆರಗಿನ ಮರ್ಮಗಳನ್ನು ಇನ್ನೂ ಪೂರ್ತಿಯಾಗಿ ಅರಗಿಸಿಕೊಂಡಿರದ ಬಚ್ಚಪ್ಪ ಗಲಿಬಿಲಿಗೊಂಡು ತನ್ನ ಎಲ್ಲ ಜೇಬುಗಳನ್ನೂ ಸರಸರನೆ ತಡಕಾಡಿ ಅವನ ಮಾಸಲು ಚಡ್ಡಿಗೆ ತಕ್ಕ ವಿಪರ್ಯಾಸದಂತೆ ಲಕಲಕಿಸುತ್ತಿದ್ದ, ಅವನ ಸಾಮಾಜಿಕ ಅಸ್ತಿತ್ವಕ್ಕೂ ಸಾಂಸ್ಕೃತಿಕ ಹಿನ್ನೆಲೆಗೂ ತದ್ವಿರುದ್ದ ಪ್ರತೀಕದಂತಿದ್ದ ಒಂದು ಬೆಳ್ಳಿಯ ಮೊಬೈಲ್ ಫೋನನ್ನು ಹೊರ ತೆಗೆದ.

ಸತತವಾಗಿ ಸದ್ದು ಮಾಡುತ್ತಲೇ ಇದ್ದ ಅದನ್ನು "ಯೇ, ವಸಿ ಇರಂಗೆ !" ಎಂದು ಗದರಿಸುತ್ತ ಎಲ್ಲ ಗುಂಡಿಗಳನ್ನು ಒಂದೊಂದಾಗಿ ಒತ್ತಿ ನೋಡಿದ.

ಸದ್ದು ನಿಂತಾಗ ಕಿವಿಯ ಬಳಿ ಹಿಡಿದು "ಅಲೋ ಯಾರು?" ಎಂದ.

ಅವನ ಪೇಚು ನೋಡುತ್ತಿದ್ದ ರಾಮಣ್ಣ ಮುಂದೆ ಬಂದು ತಲೆಕೆಳಗಾಗಿ ಹಿಡಿದಿದ್ದ ಅವನ ಫೋನನ್ನು ಸರಿಪಡಿಸಿದ ಮೇಲೆ ಬಚ್ಚಪ್ಪ

"ಊಂ ಏನವ್ವ? ಊಂ..ಸರಿ...ಊಂ...ಯೋಳ್ತಿನೇಳು" ಎನ್ನುತ್ತ ಫೋನು ಮಗುಚಿದ.

"ಲೈ, ಕೆಂಬೂತ ನಾನ್ ನವಿಲು ಅನ್ಕಂಡ್ ಕುಣಿಯಕ್ಕೋದ್ರೆ ಇಂಗೇಯ ಆಗದು. ನೀನ್ ಯಾವ್ ಸೀಮೆ ಹಾಜಿ ಮಸ್ತಾನು ಅಂತ ಇಂಥಾ ಅಬ್ಬರದ್ ಫೋನ್ ತಗಂಡಲೇ, ನ್ಯಟ್ಗೆ ಕಿವಿ ತಾವ್ ಇಟ್ಗಣಕೂ ಬರ್ದು?" ಎಂದು ಗದರಿದ ರಾಮಣ್ಣ.

"ಯೇ ನೀನೊಳ್ಳೆ... ನಾ ಯಾಕ್ ತಗಳಕೋಗ್ಲಿ, ನಮ್ಮ್ ಉಡ್ಗ ವಸಾದ್ ತಗಂಡು ಅಳೇದ್ ನಂಗ್ ಕೊಟ್ಟವ್ನೆ ಅಷ್ಟೇಯ" ಎಂದು ಸಮಜಾಯಿಷಿ ಕೊಟ್ಟ ಬಚ್ಚಪ್ಪ.

"ಓಲಿ ಯಾರಿವಗ್ ಪೋನು ಮಾಡಿದ್ದು?" "ನೀಜಿಲೆಂಡಿಂದ ಮುದ್ದ ನಿಮ್ಮನೆಗ್ ಪೋನ್ ಮಾಡಿದ್ನಂತೆ, ಅದ್ನೇಳಕ್ಕೆ ಇವಗ್ ನಿಮ್ಮ್ ಪುಟ್ಟಿ ಇಲ್ಲಿಗ್ ಮಾಡುದ್ಲು"

"ಓ? ಏನಂದ್ನಂತೆ?" "ಅದೇ ನಮ್ಮ್ ಪಾಸ್‌ಪೋಲ್ಟು ರಡಿ ಆಯ್ತ ಅಂತ ಕ್ಯೋಳಕ್ಕೆ.

ನಮ್ಮ್ ಸೀಸ ರಡಿ ಮಾಡ್ಸ್ತಾವ್ನಂತೆ, ಅದ್ಕೆ" "ಸೀಸ ಅಲ್ಕಣ್ ಪೆಕ್ರೇ, ಈಸ ಅಂತ, ಆ ದೆಸುಕ್ ಓಗಕ್ಕೆ ಪರ್ಮಿಟ್ ಇದ್ದಂಗೆ ಅದು. ಮೂರೊತ್ತೂ ಸೀಸ ರಡಿ ಮಾಡದ್ರಗಿರ್ತ್ಯ ನೋಡು ನೀನು" ಎಂದು ಬಚ್ಚಪ್ಪನನ್ನು ಗೇಲಿ ಮಾಡಿದ ರಾಮಣ್ಣ.

"ಯೇ, ಮುಟ್ಟಿ ತಿಂಗ್ಳಾಯ್ತು. ಆ ಸಿಡ್ಲ ಕೊಟ್ಟಿದ್ದ್ ಟ್ರಿಬಲೆಕ್ಸು ಒಂದೀಟು ಬಗ್ಗ್ಸ್‌ಕಣವ ಅಂದ್ರೆ ಟೇಮೇ ಸಟ್ಟಾಯ್ತಿಲ್ಲ ಅಂತೀನಿ. ಈ ಜಮೀನ್ ಮಾರೋ ಗಲಾಟೇಲಿ ಬಿಡುವಿಲ್ಲುದ್ ನೀರಾವರಿ ಮಿನಿಶ್ಟ್ರು ಇದ್ದಂಗ್ ಆಗ್ಬುಟ್ಟಿವ್ನಿ.

ಅಂದಂಗೆ ಮೊನ್ನೆ ಮುದ್ದ ಏನೋ ಅಲ್ಲಿನ್ ಮಿನಿಶ್ಟ್ರ್ ಜೊತೆ ಪಟ ತಗುಸ್ಕಂಡವ್ನೆ ಅಂತಿದ್ದೆ?"

"ಊಂ. ಅಲ್ಲಿನ್ ಪ್ರೇಮ್ ಮಿನಿಶ್ಟ್ರು ಯಾವ್ದೋ ಸೆನಿವಾರುದ್ ಸಂತೇಲಿ ಎಲ್ಲಾರ್ಗೂ ನಮ್ಸ್ಕಾರ ಮಾಡ್ಗ್ಯಂಡು ಓಡಾಡ್ತಾ ಇದ್ಲಂತೆ, ಇವ್ನೂ ನಮ್ಸ್ಕಾರ ಮಾಡಿ ಪಕ್ಕ್ದಾಗ್ ನಿಂತ್ಗಂಡು ಪಟ ತಗುಸ್ಕಂಡ್ ಬಂದ್ನಂತೆ"

"ಯಂಗಂದ್ರಂಗೆ ಓಗಿ ಪಟ ತಗುಸ್ಕಣಕ್ ಬುಟ್ಟಾರ? ಸುತ್ತ ಪೋಲೀಸ್ನೋರು ಇರಕುಲ್ವೆ?"

"ಅಲ್ಲಿ ಅವೆಲ್ಲ ಏನೂ ಇಲ್ವಂತೆ ಕಣ. ಅಲ್ಲಿನ್ ಜನ ಮಿನಿಶ್ಟ್ರು ಅವ್ರ್ ಕಡೀಕ್ ಬರದ್ ಕಾಣ್ಸುದ್ರೆ ಪಿರ್ರೆ ತಿರುವ್ಗ್ಯಂಡು ಇನ್ನೊಂದ್ ದಿಕ್ಕಿಗ್ ಒಂಟೋಯ್ತರಂತೆ. ನಮ್ಮ್ ದೇಸ್ದಿಂದ ಓಗಿರೋರೇನಂತೆ ಅವ್ರ್ ಇಂದಿಂದೆ ತಿರ್ಗಾಡ್ಕ್ಯಂಡು ಅವ್ರ್ಗ್ ಒಂದೀಟು ಮರ್ವಾದೆ ಕೊಡದು"

"ವಾ..?" "ಮಿನಿಶ್ಟ್ರುಗ್ಳು ಸಣ್ಣಪುಟ್ಟ ಡಾನ್ಸು ಡ್ರಾಮಾಗೆಲ್ಲಾ ಬಂದೋಯ್ತರೆ, ನಮ್ಮನೆಗ್ ಊಟುಕ್ ಕರುದ್ರೆ ಬಂದ್ರೂ ಏನು ದೊಡ್ಡ್ ಇಸ್ಯ ಅಲ್ಲ ಅಂದ್ನಪ್ಪ ಮುದ್ದ"

"ಉಂಟಾ? ನೀನ್ ಬಾಡ್ಸಾರು ಮಾಡ್ಸಾಕಿ ಸೋನ್ಯಾ ಗಾಂದೀನ ಕರುಸ್‌ಬುಡಪ್ಪ ನೋಡವ?"

"ಲೈ, ನಮ್ಮ್ ತಾಲೂಕ್ ಆಪೀಸರ್ ಪಿ.ಎ. ನ ಕರುದ್ರೆ ಮೂಗು ಆಕಾಸಕ್ಕೆತ್ತಿ ದಿಮಾಕು ಮಾಡ್ತನೆ, ಡೆಲ್ಲೀಗ್ ಓದೆ ಸದ್ಯ.

ಆ ಸೋನ್ಯಾ ಗಾಂದಿ ಮೇಲ್ ಯಾಕ್ಲ ಕಣ್ಣು ನಿಂಗೆ, ಅವ್ಳೇನು ನಮ್ಮ್ ದೇಸುದ್ ಪ್ರೇಮ್ ಮಿನಿಷ್ಟ್ರೇ?"

"ಆಗಿದ್ರೆ ಸಂದಾಗೇ ಇರದಪ್ಪ. ನಾವೂ ಎಲ್ಲಾರ್ ತಾವ ನೋಡ್ರಲ ನಮ್ಮ್ ಪ್ರೇಮ್ ಮಿನಿಷ್ಟ್ರು ಎಂಗೆ ಬ್ಯಳ್ಗೆ ಒಳ್ಳೆ ಸಿನಿಮಾ ಆಗುಟ್ರು ಇದ್ದಂಗೆ ಅವ್ಳೆ ಅಂತ ಯೋಳ್ಕಂಡು ತಿರುಗ್ಬೋದಾಗಿತ್ತು"

"ಥೂ ನಿನ್....ಬೆಳ್ಳಗಿರೋರ್ ಕಂಡ್ರೆ ಸಾಕು ಅಂಗೆ ಕಡ್ಡಿ ಕರ್ಪೂರ ಇಡ್ಕಂಡು ಪೂಜೆಗ್ ರಡಿ ಆಯ್ತ್ಯಲ್ಲ ಲೈ.

ನಿಂದೇನ್ ತಪ್ಪಿಲ್ಲ ಬುಡು, ಇನ್ನೂರ್ ಒರ್ಸ ಆ ಬ್ರಿಟಿಸ್‌ನೋರು ಎಲ್ಲಾರ್ಗೂ ಅರ್ದು, ಕಾಯ್ಸಿ, ಸೋದ್ಸಿ ಕುಡುಸ್ಬುಟ್ಟ್ ಓಗವ್ರೆ, ಇಷ್ಟ್ ಬೇಗ ಎಲ್ಲ್ ಇಳ್ದಾತು ಅದ್ರ್ ನಸ.

ನಿನ್ನ್ ನೀಜಿಲೆಂಡ್ಗ್ ಕರ್ಕಂಡೋದ್ರೆ ಬೀದೀಲ್ ಕಂಡೋರ್ಗೆಲ್ಲ ಅಡ್ಡ್‌ಬೀಳಕ್ಕೋಗಿ ನಮ್ಮ್ ಮುದ್ದನ್ ಮರ್ವಾದೆ ಕಳೀತಿಯ ಆಟೇಯ"

"ಯೇ, ಸುಮ್ಕೆ ತಮಾಸಿಗ್ ಅಂಗಂದ್ರೆ ನೀನ್ ಒಂದೇ ಏಟ್ಗೆ ನಮ್ಮ್ ಇರೀಕುರ್ ತಾವ್ಕೆ ಓಯ್ತ್ಯಲ್ಲಪ್ಪೋ.

ಮನೇಗಿರ ನಸ ಸುದಾರ್ಸುದ್ರೆ ಸಾಕಾಗ್ಯದೆ ಸದ್ಯ ಬ್ಯಾರೆ ಅಚ್ಗಣಕ್ಕೋಗು ನೀನು "

"ಅದಂಗೇ ಕಣ್ಲ, ಒಟ್ಟ್ ತುಂಬ ರಾಗಿಮುದ್ದೆ ಇದ್ರೂ ಅನ್ನ ಕಂಡೇಟ್ಗೆ ಕಣ್ಣ್ ಅರ್ಳ್ತವಂತೆ. ಈ ನಸದ್ ಕತೆ ಅಂಗಿರ್ಲಿ, ಆ ಸಿಡ್ಲ ಕೊಟ್ಟಿದ್ ಸೀಸ ಮುಗ್ಸಕ್ ಟೇಮೇ ಆಗಿಲ್ಲ ಅಂದಲ್ವ ನೀನು?"

"ಊನಪ್ಪೋ" "ನಡಿ ಇವಗ್ ಟೇಮ್ ಕೊಡ್ತಿನಿ, ಮಗ್ಚಾಕವ ಅತ್ಲಗೆ" ಎಂದ ರಾಮಣ್ಣ.

ಇಬ್ಬರೂ ಹೊಸ ಬಿರುಸಿನಿಂದ ತೋಟದ ಮನೆಯ ಕಡೆ ಹೆಜ್ಜೆ ಹಾಕಿದರು

No comments:

Post a Comment